16/04/2026
ಮೊನ್ನೆ ನ್ಯೂಸ್ ನೋಡುವಾಗ ಪ್ರಧಾನಿ ಮೋದಿಯವರು ಬಳಸಿದ 'ಕ್ರಿಟಿಕಾಲಿಟಿ' ಅನ್ನೋ ಪದ ನನ್ನ ತಲೆಗೆ ಹುಳ ಬಿಟ್ಟಿತ್ತು. ನಿಮ್ಮ ಕಿವಿಗೂ ಕೂಡಾ ಮೋದಿಯವರು ನಮ್ಮ ನ್ಯೂಕ್ಲಿಯರ್ ವಿಜ್ಞಾನಿಗಳ ಸಾಧನೆಯನ್ನು ಹಾಡಿ ಹೊಗಳಿದ ಸುದ್ದಿ ಬಿದ್ದಿರಬಹುದು. ಅಲ್ಲಿ ಅವರು ಬಳಸಿದ 'ಕ್ರಿಟಿಕಾಲಿಟಿ' ಅನ್ನೋ ಒಂದು ಪದದ ಹಿಂದೆ ನಮ್ಮ ದೇಶದ ಬರೋಬ್ಬರಿ 70 ವರ್ಷಗಳ ಕನಸಿದೆ! ಇದು ಕೇವಲ ಲ್ಯಾಬ್ ನಲ್ಲಿ ನಡೆದ ಯಾವುದೋ ಒಂದು ಪ್ರಯೋಗವಲ್ಲ, ನಮ್ಮ ಭವಿಷ್ಯದ ವಿದ್ಯುತ್ ಸಮಸ್ಯೆಗೆ ಸಿಕ್ಕಿರುವ ಬಹುದೊಡ್ಡ ಬ್ರಹ್ಮಾಸ್ತ್ರ.
ಬನ್ನಿ, ಇದರ ಬಗ್ಗೆ ಸಾಧ್ಯವಾದಷ್ಟು ಸರಳವಾಗಿ ತಿಳಿದುಕೊಳ್ಳೋಣ.
ಏನಿದು 'ಕ್ರಿಟಿಕಾಲಿಟಿ'?
ತುಂಬಾ ಸಿಂಪಲ್ ಆಗಿ ಹೇಳ್ತೀನಿ ಕೇಳಿ. ನ್ಯೂಕ್ಲಿಯರ್ ರಿಯಾಕ್ಟರ್ ಅಂದ್ರೆ ಯುರೇನಿಯಂ ಪರಮಾಣುಗಳನ್ನು ಒಡೆದು ವಿಪರೀತ ಶಾಖ ಉತ್ಪಾದಿಸುವ ಒಂದು ಯಂತ್ರ. ಅಲ್ಲಿ ಒಂದು ಸಣ್ಣ ನ್ಯೂಟ್ರಾನ್ ಹೋಗಿ ಆಟಮ್ ಗೆ ಡಿಕ್ಕಿ ಹೊಡೆದಾಗ ಅದು ಒಡೆದು ಭಾರೀ ಶಾಖದ ಜೊತೆಗೆ ಹೊಸದಾಗಿ 2-3 ನ್ಯೂಟ್ರಾನ್ ಗಳು ಹುಟ್ಟಿಕೊಳ್ಳುತ್ತವೆ. ಈ ಹೊಸ ನ್ಯೂಟ್ರಾನ್ ಗಳು ಹೋಗಿ ಪಕ್ಕದ ಆಟಮ್ ಗಳನ್ನು ಹೊಡೆಯುತ್ತವೆ. ಇದನ್ನೇ ವಿಜ್ಞಾನಿಗಳು 'ಚೈನ್ ರಿಯಾಕ್ಷನ್' ಅಂತ ಕರೀತಾರೆ.
ಆದರೆ ಈ ರಿಯಾಕ್ಷನ್ ಕಂಟ್ರೋಲ್ ತಪ್ಪಿದರೆ ದೊಡ್ಡ ಅನಾಹುತ ಗ್ಯಾರಂಟಿ. ಅದಕ್ಕಾಗಿಯೇ ಒಂದು ಆಟಮ್ ಒಡೆದಾಗ ಅದರಿಂದ ಹೊರಬರುವ ನ್ಯೂಟ್ರಾನ್ ಗಳಲ್ಲಿ ಕೇವಲ ಒಂದೇ ಒಂದು ನ್ಯೂಟ್ರಾನ್ ಮಾತ್ರ ಮುಂದಿನ ರಿಯಾಕ್ಷನ್ ಮಾಡಲು ಬಳಕೆಯಾಗುವಂತೆ ಒಂದು ಪರ್ಫೆಕ್ಟ್ ಬ್ಯಾಲೆನ್ಸ್ ಕಾಯ್ದುಕೊಳ್ಳಲಾಗುತ್ತದೆ. ಈ ಸ್ವಯಂ-ನಿಯಂತ್ರಿತ ಹಂತವನ್ನೇ ವಿಜ್ಞಾನಿಗಳು 'ಕ್ರಿಟಿಕಾಲಿಟಿ' ಅಂತ ಕರೆಯೋದು.
ಅಂದರೆ ಬಾಂಬ್ ಆಗದಂತೆ ತಡೆದು, ನಿರಂತರವಾಗಿ ಪವರ್ ಉತ್ಪಾದಿಸಲು ರಿಯಾಕ್ಟರ್ ಸಿದ್ಧವಾಗಿದೆ ಎಂದರ್ಥ. ಒಂದು ರಾಕೆಟ್ ಲಾಂಚ್ ಆಗಿ ತನ್ನ ಕಕ್ಷೆಗೆ ಕರಾರುವಕ್ಕಾಗಿ ಹೋಗಿ ಸೇರಿದ ಹಾಗೆ ಅಂತ ಅಂದ್ಕೊಳಿ!
ಕ್ರಿಟಿಕಾಲಿಟಿ ತಲುಪಿದ ಮೇಲೆ ಮುಂದೇನು?
ಒಮ್ಮೆ ಕ್ರಿಟಿಕಾಲಿಟಿ ಸಾಧಿಸಿದರೆ ಕೆಲಸ ಮುಗಿಯಿತು ಎಂದಲ್ಲ. ಕಾರಿನ ಎಂಜಿನ್ ಸ್ಟಾರ್ಟ್ ಮಾಡಿ ಐಡಲ್ ನಲ್ಲಿ ಇಟ್ಟ ಹಾಗೆ ಇದೊಂದು ಆರಂಭವಷ್ಟೇ!
ಆಮೇಲೆ ರಿಯಾಕ್ಟರ್ ಅನ್ನು ನಿಧಾನವಾಗಿ ಅದರ ಪೂರ್ಣ ಸಾಮರ್ಥ್ಯಕ್ಕೆ ತರುತ್ತಾರೆ.
ಆಟಮ್ ಒಡೆದಾಗ ಊಹಿಸಲೂ ಸಾಧ್ಯವಾಗದಷ್ಟು ಅಗಾಧ ಪ್ರಮಾಣದ ಶಾಖ ಬಿಡುಗಡೆಯಾಗುತ್ತದೆ. ಈ ಯುರೇನಿಯಂ ಇಂಧನವನ್ನು ಇಟ್ಟಿರುವ ರಿಯಾಕ್ಟರ್ ನ ಸುತ್ತಲೂ ಸತತವಾಗಿ ನೀರನ್ನು ಪೈಪ್ ಗಳ ಮೂಲಕ ಹರಿಯುವಂತೆ ವ್ಯವಸ್ಥೆ ಮಾಡಿರುತ್ತಾರೆ.
ಕೆಂಪಗೆ ಕಾದ ಕಬ್ಬಿಣವನ್ನು ನೀರಿಗೆ ಹಾಕಿದಾಗ ಏನಾಗುತ್ತೆ? ಅದೇ ರೀತಿ, ಆಟಮ್ ಒಡೆದಾಗ ಬರುವ ವಿಪರೀತ ಶಾಖವನ್ನು ಈ ನೀರು ಹೀರಿಕೊಂಡು ಭೋರ್ಗರೆಯುತ್ತಾ ಕುದಿಯಲು ಶುರುವಾಗಿ, ಭಾರೀ ಒತ್ತಡದ ಹಬೆಯಾಗಿ ಬದಲಾಗುತ್ತದೆ.
ನಂತರ ಈ ಹಬೆ ವೇಗವಾಗಿ ಹೋಗಿ ದೊಡ್ಡ ದೊಡ್ಡ ಟರ್ಬೈನ್ ಗಳನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸುತ್ತದೆ. ಕೊನೆಯದಾಗಿ ಅಲ್ಲಿ ತಯಾರಾದ ವಿದ್ಯುತ್ ಅನ್ನು ಪವರ್ ಗ್ರಿಡ್ ಗಳಿಗೆ ಕನೆಕ್ಟ್ ಮಾಡುತ್ತಾರೆ. ಅಲ್ಲಿಂದಲೇ ನಮ್ಮ-ನಿಮ್ಮ ಮನೆಗಳಿಗೆ 24/7 ಕರೆಂಟ್ ಬರೋದು!
ಇದರಲ್ಲಿ ನಮ್ಮದೇನು ಸಾಧನೆ?
ನಮ್ಮ ಬಹುದೊಡ್ಡ ಸಾಧನೆ ಅಂದ್ರೆ ಈ ರಿಯಾಕ್ಟರ್ ಗಳನ್ನು ನಾವು ಯಾರ ಹಂಗೂ ಇಲ್ಲದೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ (Indigenous Technology) ನಿರ್ಮಿಸಿರುವುದು.
ನೆನಪಿದ್ಯಾ? 1974 ಮತ್ತು 1998ರ ಪೋಖ್ರಾನ್ ಟೆಸ್ಟ್ ನಂತರ ಇಡೀ ಜಗತ್ತು ನಮ್ಮ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ನಮಗೆ ಯಾರೊಬ್ಬರೂ ತಂತ್ರಜ್ಞಾನ ಕೊಡಲು ಸಿದ್ಧರಿರಲಿಲ್ಲ. ಆಗ ನಮ್ಮ ವಿಜ್ಞಾನಿಗಳು ಛಲ ಬಿಡದೇ ಶೂನ್ಯದಿಂದ ಈ ಟೆಕ್ನಾಲಜಿಯನ್ನು ತಾವೇ ಬಿಲ್ಡ್ ಮಾಡಿದರು.
ವಿದೇಶಿ ರಿಯಾಕ್ಟರ್ ಗಳನ್ನು ಕೊಂಡುಕೊಳ್ಳಲು ನಾವು ಲಕ್ಷಾಂತರ ಕೋಟಿ ಸುರಿಯಬೇಕಿತ್ತು. ಆದರೆ ಇಲ್ಲಿ ಬಳಸಿರುವ ಪ್ರತಿಯೊಂದು ನಟ್, ಬೋಲ್ಟ್, ಸಾಫ್ಟ್ವೇರ್ ಎಲ್ಲವನ್ನೂ ನಮ್ಮ ಭಾರತೀಯ ಇಂಜಿನಿಯರ್ ಗಳೇ ಸಿದ್ಧಪಡಿಸಿದ್ದಾರೆ. ಗುಜರಾತಿನ ಕಾಕ್ರಪಾರ್ ನಲ್ಲಿ ಇತ್ತೀಚೆಗೆ ಸಾಧಿಸಿದ ಕ್ರಿಟಿಕಾಲಿಟಿ ಇದಕ್ಕೆ ಲೇಟೆಸ್ಟ್ ಉದಾಹರಣೆ. ಈಗ ಇದೇ ತಂತ್ರಜ್ಞಾನವನ್ನು ಬೇರೆ ದೇಶಗಳಿಗೆ ಮಾರುವಷ್ಟು ನಾವೇ ಸ್ಟ್ರಾಂಗ್ ಆಗಿದ್ದೇವೆ.
ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) - ಇದೊಂದು ಮ್ಯಾಜಿಕ್!
ಭಾರತದ ಕಲ್ಪಾಕ್ಕಂನಲ್ಲಿ ನಡೆಯುತ್ತಿರುವ ಈ 'ಫಾಸ್ಟ್ ಬ್ರೀಡರ್ ರಿಯಾಕ್ಟರ್' ಕೆಲಸ ಒಂದು ರೀತಿಯಲ್ಲಿ ಮ್ಯಾಜಿಕ್ ಇದ್ದ ಹಾಗೆ. ಸಾಮಾನ್ಯವಾಗಿ ರಿಯಾಕ್ಟರ್ ಗೆ ಇಂಧನ ಹಾಕಿದಂತೆ ಅದು ಉರಿದು ಖಾಲಿಯಾಗುತ್ತದೆ, ಹೌದಾ? ಆದರೆ ಈ ಟೆಕ್ನಾಲಜಿ ಹಾಗಲ್ಲ. ಇಲ್ಲಿ ಇಂಧನ ಉರಿದು ವಿದ್ಯುತ್ ತಯಾರಾಗುವ ಹೊತ್ತಿಗೆ, ರಿಯಾಕ್ಟರ್ ಒಳಗಡೆ ಇನ್ನಷ್ಟು ಹೊಸ ಇಂಧನ ಸೃಷ್ಟಿಯಾಗಿರುತ್ತದೆ!
ಅಂದ್ರೆ ನಿಮ್ಮ ಬೈಕ್ ಗೆ 1 ಲೀಟರ್ ಪೆಟ್ರೋಲ್ ಹಾಕಿಕೊಂಡು 50 ಕಿಲೋಮೀಟರ್ ಓಡಿಸಿದ ಮೇಲೆ, ಟ್ಯಾಂಕ್ನಲ್ಲಿ 1.5 ಲೀಟರ್ ಪೆಟ್ರೋಲ್ ತಾನಾಗಿಯೇ ತಯಾರಾದ್ರೆ ಹೇಗಿರುತ್ತೆ? ಸೇಮ್ ಟು ಸೇಮ್ ಹಾಗೆ! ಯುರೇನಿಯಂ-238 ಅನ್ನು ಪ್ಲುಟೋನಿಯಂ ಆಗಿ ಪರಿವರ್ತಿಸುವ ಈ ಅದ್ಭುತ ತಂತ್ರಜ್ಞಾನದಲ್ಲಿ ರಷ್ಯಾ, ಚೀನಾ ಜೊತೆಗೆ ಈಗ ನಮ್ಮ ಭಾರತವೂ ಸೇರಿಕೊಂಡಿದೆ.
ಸಾಮಾನ್ಯ ಜನರಿಗೆ ಇದರಿಂದೇನು ಲಾಭ?
ಸರಿ, ಇದೆಲ್ಲಾ ರಾಜಕಾರಣಿಗಳ ಭಾಷಣಕ್ಕೆ ಓಕೆ. ಅವರುಗಳ ಪೊಳ್ಳು ಆಶ್ವಾಸನೆಗಳ ಇನ್ನೊಂದು ರೂಪ ಅಂತ ನೀವೇನಾದ್ರೂ ಅಂದುಕೊಂಡಿದ್ದರೆ ಖಂಡಿತ ತಪ್ಪು. ಇದರಿಂದ ನಮ್ಮಂತಹ ಸಾಮಾನ್ಯ ಜನರಿಗೂ ಲಾಭವಿದೆ.
ಮೊದಲನೆಯದಾಗಿ, ಕರೆಂಟ್ ಕಟ್ ಸಮಸ್ಯೆ ಇರೋದಿಲ್ಲ. ಸೋಲಾರ್ ಅಥವಾ ವಿಂಡ್ ಪವರ್ ಕೆಲವು ವಾತಾವರಣದಲ್ಲಿ ಕೈಕೊಡಬಹುದು. ಆದರೆ ನ್ಯೂಕ್ಲಿಯರ್ ಪ್ಲಾಂಟ್ ಯಾವುದೇ ಹವಾಮಾನದಲ್ಲೂ 24/7 ನಿರಂತರವಾಗಿ ಪವರ್ ಕೊಡಬಲ್ಲದು.
ಒಮ್ಮೆ ಪ್ಲಾಂಟ್ ಕಟ್ಟಿ ಮುಗಿಸಿ ಈ ಯೋಜನೆಯಲ್ಲಿ ಯಶಸ್ವಿಯಾದರೆ ವಿದ್ಯುತ್ ಉತ್ಪಾದನಾ ವೆಚ್ಚ ತುಂಬಾನೇ ಕಡಿಮೆ ಆಗುತ್ತದೆ. ಇದು ಲಾಂಗ್ ರನ್ ನಲ್ಲಿ ನಮ್ಮ-ನಿಮ್ಮ ಕರೆಂಟ್ ಬಿಲ್ ಕಡಿಮೆಯಾಗೋದಕ್ಕೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಇದು ಕಡಿಮೆ ಕಾರ್ಬನ್ ಉತ್ಪಾದಿಸುವ ಶುದ್ಧ ಎನರ್ಜಿ.
ಇದಕ್ಕಿಂತ ದೊಡ್ಡ ವಿಷಯ ಅಂದ್ರೆ, ನಮ್ಮ ಭಾರತದಲ್ಲಿ 'ಥೋರಿಯಂ' ನಿಕ್ಷೇಪ ವಿಪರೀತವಾಗಿದೆ. ಜಗತ್ತಿನ ಒಟ್ಟು ಥೋರಿಯಂ ನಿಕ್ಷೇಪದಲ್ಲಿ ಸುಮಾರು 25% ರಷ್ಟು ನಮ್ಮಲ್ಲೇ (ಮುಖ್ಯವಾಗಿ ಕೇರಳದ ಮರಳುಗಲ್ಲುಗಳಲ್ಲಿ) ಇದೆ ಅನ್ನೋದು ನಮಗೆ ದೊಡ್ಡ ಪ್ಲಸ್ ಪಾಯಿಂಟ್. ಈ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಗಳು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ನಾವು ಈ ಥೋರಿಯಂ ಬಳಸಿ ಇಡೀ ಭಾರತಕ್ಕೆ ಅತಿ ಕಡಿಮೆ ದರದಲ್ಲಿ ವಿದ್ಯುತ್ ನೀಡಬಹುದು!
ನಿಮಗೆ ಅನಿಸಬಹುದು ಇದೆಲ್ಲಾ ಇವ್ನೇನೋ ಸುಮ್ನೆ ಹೇಳ್ತಿದಾನೆ, ಇಡೀ ದೇಶಕ್ಕೆ ವಿದ್ಯುತ್ ಕೊಡೋದಕ್ಕೆ ಸಾಧ್ಯವಾ ಅನ್ನೋ ಅನುಮಾನ ಕೂಡಾ ಮೂಡಬಹುದು.
ಇದರ ಅರ್ಥ ಇವತ್ತೇ ರಾತ್ರೋರಾತ್ರಿ ಇಡೀ ದೇಶಕ್ಕೆ ನ್ಯೂಕ್ಲಿಯರ್ ಪವರ್ ನಿಂದಲೇ ಕರೆಂಟ್ ಸಿಗುತ್ತದೆ ಅಂತಲ್ಲ. ಸದ್ಯಕ್ಕೆ ನಮ್ಮ ದೇಶದಲ್ಲಿ ನ್ಯೂಕ್ಲಿಯರ್ ಪವರ್ ಪಾಲು ಕೇವಲ 3% ಮಾತ್ರ ಇರುವುದು ನಿಜ. ಆದರೆ ಲೇಖನದಲ್ಲಿ ವಿವರಿಸಿರುವುದು ಭಾರತದ ಭವಿಷ್ಯದ ಎನರ್ಜಿ ಪ್ಲಾನ್ ಬಗ್ಗೆ.
ಡಾ. ಹೋಮಿ ಭಾಭಾ ಅವರು ರೂಪಿಸಿದ 3 ಹಂತದ ನ್ಯೂಕ್ಲಿಯರ್ ಕಾರ್ಯಕ್ರಮದಲ್ಲಿ ಈಗ ಸಾಧಿಸಿರುವ ಈ 'ಕ್ರಿಟಿಕಾಲಿಟಿ' ಮತ್ತು 'ಫಾಸ್ಟ್ ಬ್ರೀಡರ್' ತಂತ್ರಜ್ಞಾನ ಎರಡನೇ ಹಂತವಾಗಿದೆ. ಇದು ಭವಿಷ್ಯದಲ್ಲಿ ನಮ್ಮಲ್ಲೇ ಅಗಾಧವಾಗಿರುವ 'ಥೋರಿಯಂ' ಅನ್ನು ಬಳಸಲು ದಾರಿ ಮಾಡಿಕೊಡುತ್ತದೆ, ಅದೇ ಮೂರನೇ ಹಂತ.
ಕಲ್ಲಿದ್ದಲಿನ ನಿಕ್ಷೇಪ ಮುಗಿಯುತ್ತಿರುವ ಈ ಕಾಲದಲ್ಲಿ, 24/7 ನಿರಂತರವಾಗಿ ಸ್ಥಿರ ಕರೆಂಟ್ ಕೊಡಬಲ್ಲ ಅತ್ಯುತ್ತಮ ಬ್ಯಾಕಪ್ ಎಂದರೆ ಅದು ನ್ಯೂಕ್ಲಿಯರ್ ಮಾತ್ರ. ಇದು 20-30 ವರ್ಷಗಳ ದೂರದೃಷ್ಟಿಯ ಪ್ರಾಜೆಕ್ಟ್ ಹೊರತು ಸುಳ್ಳಲ್ಲ. ವಿಜ್ಞಾನದ ಹೆಜ್ಜೆಗಳು ನಿಧಾನವಾಗಿರುತ್ತವೆ, ಆದರೆ ಭದ್ರವಾಗಿರುತ್ತವೆ!
ಕೆಲವರಿಗೆ ಮೇಲ್ನೋಟಕ್ಕೆ ಒಂದು ಪ್ರಶ್ನೆ ಬರಬಹುದು. 2014ರ ಮೊದಲು ನಮ್ಮ ದೇಶದ ಒಟ್ಟು ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇದ್ದದ್ದು 4,780 ಮೆಗಾವ್ಯಾಟ್. ಕಳೆದ ಹತ್ತು ವರ್ಷಗಳಲ್ಲಿ ಇದು 8,180 ಮೆಗಾವ್ಯಾಟ್ ಗೆ ಏರಿಕೆಯಾಗಿದೆ. ಅಂದರೆ "ಕೇವಲ 4000 ಮೆಗಾವ್ಯಾಟ್ ಹೆಚ್ಚಾಗಿದ್ದಕ್ಕೆ ಇಷ್ಟೊಂದು ಬಿಲ್ಡಪ್ ಬೇಕಾ?" ಅಂತ.
ನೀವಿಲ್ಲಿ ಗಮನಿಸಬೇಕಾದ ಬಹುಮುಖ್ಯ ವಿಚಾರ ಏನಂದ್ರೆ ನ್ಯೂಕ್ಲಿಯರ್ ಪ್ಲಾಂಟ್ ಕಟ್ಟೋದು ಅಂದರೆ ನಿಮ್ಮನೆ ಛಾವಣಿ ಮೇಲೆ ಸೋಲಾರ್ ಪ್ಯಾನಲ್ ತಂದು ಫಿಕ್ಸ್ ಮಾಡಿದಷ್ಟು ಸುಲಭವಲ್ಲ!
ಒಂದೇ ಒಂದು ನ್ಯೂಕ್ಲಿಯರ್ ರಿಯಾಕ್ಟರ್ ಕಟ್ಟಲು ಕನಿಷ್ಠ 10 ರಿಂದ 15 ವರ್ಷಗಳೇ ಬೇಕು, ಸಾವಿರಾರು ಕೋಟಿ ಫಂಡ್ ಬೇಕು, ಜೊತೆಗೆ ಜಾಗತಿಕ ಮಟ್ಟದ ನೂರಾರು ಕ್ಲಿಯರೆನ್ಸ್ ಬೇಕು. ಹೀಗಿರುವಾಗ ಅತ್ಯಂತ ಕಟ್ಟುನಿಟ್ಟಾದ ಈ ಕ್ಷೇತ್ರದಲ್ಲಿ, ಕೇವಲ ಒಂದು ದಶಕದಲ್ಲಿ ದೇಶದ ಉತ್ಪಾದನೆಯನ್ನು ಬಹುತೇಕ ದುಪ್ಪಟ್ಟು ಮಾಡುವುದು ಎಂದರೆ ಅದು ಸಾಮಾನ್ಯದ ಮಾತಲ್ಲ.
ಹಾಗಾದರೆ ಹಿಂದಿನ ಸರ್ಕಾರಗಳಲ್ಲಿ ಆಗದ ಕೆಲಸ ಈಗ ಹೇಗೆ ಸಾಧ್ಯವಾಯ್ತು?
ಹಿಂದೆ ಏನಾಗುತ್ತಿತ್ತು ಅಂದ್ರೆ ಒಂದು ನ್ಯೂಕ್ಲಿಯರ್ ರಿಯಾಕ್ಟರ್ ಕಟ್ಟಬೇಕು ಅಂದ್ರೆ ಒಂದೊಂದಕ್ಕೇ ಪ್ರತ್ಯೇಕವಾಗಿ ಪರ್ಮಿಷನ್ ತಗೋಬೇಕಿತ್ತು, ಒಂದೊಂದಕ್ಕೇ ಫಂಡ್ ರಿಲೀಸ್ ಆಗ್ತಿತ್ತು. ಇದರಿಂದ ವಿಪರೀತ ಸಮಯ ಮತ್ತು ಹಣ ಪೋಲಾಗುತ್ತಿತ್ತು. ಜೊತೆಗೆ ಕೇವಲ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ (NPCIL) ಮಾತ್ರ ಈ ಕೆಲಸ ಮಾಡಬೇಕಿತ್ತು, ಅವರ ಬಳಿ ಅಷ್ಟು ದೊಡ್ಡ ಮಟ್ಟದ ಫಂಡ್ ಇರುತ್ತಿರಲಿಲ್ಲ.
ಆದರೆ ಈ ಸರ್ಕಾರ ಬಂದ ಮೇಲೆ 2017ರಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 700 ಮೆಗಾವ್ಯಾಟ್ ಸಾಮರ್ಥ್ಯದ ಬರೋಬ್ಬರಿ 10 ಹೊಸ ರಿಯಾಕ್ಟರ್ ಗಳಿಗೆ ಒಂದೇ ಬಾರಿಗೆ 'ಫ್ಲೀಟ್ ಮೋಡ್' ಅಡಿಯಲ್ಲಿ ಒಪ್ಪಿಗೆ ನೀಡಲಾಯಿತು. ಅಂದ್ರೆ ಬಿಡಿಬಿಡಿಯಾಗಿ ಅಲ್ಲ, ಒಂದೇ ಸಲಕ್ಕೆ ನಿರ್ಮಾಣ ಮಾಡಲು ಗ್ರೀನ್ ಸಿಗ್ನಲ್ ಕೊಡ್ತು. ಇದರಿಂದ ಚಿಕ್ಕ ವಸ್ತುಗಳಿಂದ ಹಿಡಿದು ದೊಡ್ಡ ಯಂತ್ರಗಳವರೆಗೆ ಎಲ್ಲವನ್ನೂ ಒಟ್ಟಿಗೆ ಆರ್ಡರ್ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಯ್ತು. ಇದರಿಂದ ಸಾವಿರಾರು ಕೋಟಿ ವೆಚ್ಚ ಮತ್ತು ಸಮಯ ಎರಡೂ ಉಳಿಯಿತು.
ಅಷ್ಟೇ ಅಲ್ಲದೇ, ಹಣಕಾಸಿನ ಕೊರತೆ ನೀಗಿಸಲು ಅಟಾಮಿಕ್ ಎನರ್ಜಿ ಕಾಯ್ದೆಗೆ ತಿದ್ದುಪಡಿ ತಂದು NTPC ಹಾಗೂ Indian Oil ನಂತಹ ಬೃಹತ್ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಜಾಯಿಂಟ್ ವೆಂಚರ್ ಮೂಲಕ ಸಾವಿರಾರು ಕೋಟಿ ಬಂಡವಾಳ ಹೂಡಲು ದಾರಿ ಮಾಡಿಕೊಟ್ಟಿತು. ಹೀಗೆ 2031ರ ಸಮಯಕ್ಕೆ ಉತ್ಪಾದನೆಯನ್ನು 22,480 ಮೆಗಾವ್ಯಾಟ್ ಗೆ ಏರಿಸುವ ಬೃಹತ್ ಗುರಿಯೊಂದಿಗೆ ಸರ್ಕಾರ ವಿಜ್ಞಾನಿಗಳ ಬೆನ್ನೆಲುಬಾಗಿ ನಿಂತಿದೆ.
ಇನ್ನು ಇದಕ್ಕೆ ಮಾಡಿರೋ ಖರ್ಚಿನ ಬಗ್ಗೆ ಹೇಳ್ತೀನಿ.
ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿಯೇ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, 2014ರ ಮೊದಲು ನಮ್ಮ 'ಪರಮಾಣು ಇಂಧನ ಇಲಾಖೆ'ಯ (Department of Atomic Energy) ಒಟ್ಟು ವಾರ್ಷಿಕ ಬಜೆಟ್ 13,889 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಈ ಸರ್ಕಾರ ಬಂದ ಮೇಲೆ ಅದನ್ನು ಸತತವಾಗಿ ಏರಿಸುತ್ತಾ ಬಂದು, ಈ ವರ್ಷದ ಬಜೆಟ್ನಲ್ಲಿ 23,604 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ!
ಅಂದರೆ ಹತ್ತು ವರ್ಷಗಳಲ್ಲಿ ಈ ಕ್ಷೇತ್ರದ ಬಜೆಟ್ ನಲ್ಲಿ ಶೇಕಡಾ 70ರಷ್ಟು ಬೃಹತ್ ಏರಿಕೆ ಮಾಡಿದ್ದಾರೆ. ಬರೀ ಬಜೆಟ್ ಹೆಚ್ಚಿಸಿದ್ದು ಮಾತ್ರವಲ್ಲ, ಹೊಸ ತಂತ್ರಜ್ಞಾನದ ಸಂಶೋಧನೆಗೆ (R&D) ಕೂಡ ಹಿಂದೆ ನೀಡಿದ್ದಕ್ಕಿಂತ ದುಪ್ಪಟ್ಟು ಹಣ ನೀಡಲಾಗಿದೆ.
ಹಿಂದೆ ಒಂದು ಪ್ಲಾಂಟ್ ಕಟ್ಟಲು ಫಂಡ್ಸ್ ಇಲ್ಲದೆ ವಿಜ್ಞಾನಿಗಳು ಫೈಲ್ ಹಿಡಿದು ವರ್ಷಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಆ ಹಣಕಾಸಿನ ಕೊರತೆಯನ್ನೇ ನೀಗಿಸಿರುವುದರಿಂದ, ನಮ್ಮ ಇಂಜಿನಿಯರ್ ಗಳಿಗೆ ಗುಜರಾತಿನ ಕಾಕ್ರಪಾರ್ ಮತ್ತು ತಮಿಳುನಾಡಿನ ಕಲ್ಪಾಕ್ಕಂನಲ್ಲಿ ಇಂತಹ ಮ್ಯಾಜಿಕ್ ಮಾಡಲು ಸಾಧ್ಯವಾಯಿತು.
ಇದು ಕೇವಲ ನಮ್ಮ ದೇಶದ ಮಾಧ್ಯಮಗಳು ಕಟ್ಟುತ್ತಿರುವ ಕಥೆ ಅಂತ ನೀವು ಅಂದುಕೊಳ್ಳಬಾರದು. ಭಾರತೀಯ ನ್ಯೂಸ್ ಚಾನೆಲ್ಗಳನ್ನು ಮೂದಲಿಸಿ ಪಕ್ಕಕ್ಕಿಟ್ಟರೂ, ಕೆಲವರ ಪಾಲಿನ ಜಾಗತಿಕ ಮಟ್ಟದ ಪ್ರತಿಷ್ಠಿತ ಮಾಧ್ಯಮಗಳು ಭಾರತದ ಈ ದಿಟ್ಟ ಹೆಜ್ಜೆಯನ್ನು ಬೆರಗಾಗಿ ವರದಿ ಮಾಡಿವೆ.
ಉದಾಹರಣೆಗೆ ಭಾರತದ ಬಹುತೇಕರು ನಂಬುವ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯಾದ 'ಅಲ್ ಜಜೀರಾ' (Al Jazeera) ಇತ್ತೀಚೆಗೆ ಕಲ್ಪಾಕ್ಕಂನಲ್ಲಿ ನಡೆದ ಸಾಧನೆಯ ಬಗ್ಗೆ ವಿಶೇಷ ವರದಿ ಮಾಡಿತು. ಅದರಲ್ಲಿ, "ಭಾರತ ಇದನ್ನು ಸಾಧಿಸಿದರೆ ರಷ್ಯಾವನ್ನು ಬಿಟ್ಟರೆ ಜಗತ್ತಿನಲ್ಲಿ ಇಂತಹ ಕಮರ್ಷಿಯಲ್ 'ಫಾಸ್ಟ್ ಬ್ರೀಡರ್ ರಿಯಾಕ್ಟರ್' ತಂತ್ರಜ್ಞಾನವನ್ನು ಹೊಂದಿರುವ ಎರಡನೇ ದೇಶ ಆಗುತ್ತದೆ" ಎಂದು ಬರೆದುಕೊಂಡಿದೆ. ಏಕೆಂದರೆ ಅಮೇರಿಕಾದಿಂದ ಹಿಡಿದು ಬಹುತೇಕ ದೇಶಗಳು ಇದರಲ್ಲಿ ಯಶಸ್ಸು ಕಂಡಿಲ್ಲ. ಕೇವಲ ರಷ್ಯಾ ಮಾತ್ರ ಇಲ್ಲಿಯವರೆಗೆ ಸಂಪೂರ್ಣವಾಗಿ ಯಶಸ್ಸು ಕಂಡಿರೋದು.
ಇನ್ನು ವರ್ಲ್ಡ್ ನ್ಯೂಕ್ಲಿಯರ್ ನ್ಯೂಸ್ (World Nuclear News) ಸಂಸ್ಥೆ ಕೂಡ ಭಾರತದ ಈ "ಸ್ವಾವಲಂಬಿ" ಹೆಜ್ಜೆಯನ್ನು ಶ್ಲಾಘಿಸಿದೆ.
ಒಂದು ಕಾಲದಲ್ಲಿ ನಮ್ಮನ್ನು ಕಡೆಗಣಿಸಿದ್ದ ಬಹುತೇಕ ದೇಶಗಳಿಗೆ ಭಾರತ ಇಂದು ತನ್ನ ತಂತ್ರಜ್ಞಾನದ ತಾಕತ್ತನ್ನು ಸ್ಪಷ್ಟವಾಗಿ ತೋರಿಸಿದೆ. ಬೇರೆ ದೇಶಗಳ ಕಿಂಚಿತ್ತೂ ಸಹಾಯವಿಲ್ಲದೇ ಸಾಧಿಸಿದ ಈ 'ಕ್ರಿಟಿಕಾಲಿಟಿ' ಹಂತವು ಭಾರತ ಎನರ್ಜಿ ಕ್ಷೇತ್ರದಲ್ಲಿ ಇಟ್ಟಿರುವ ಬಹುದೊಡ್ಡ ಹೆಜ್ಜೆ. 🇮🇳🙌
ನಮ್ಮ ವಿಜ್ಞಾನಿಗಳ ಈ ಐತಿಹಾಸಿಕ ಸಾಧನೆಯ ಬಗ್ಗೆ ನನಗೆ ಅರ್ಥವಾಗಿದ್ದನ್ನು ಆದಷ್ಟು ಸರಳವಾಗಿ ನಿಮಗೆಲ್ಲರಿಗೂ ತಲುಪಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.
-ಸಂತೋಷ್ ವಿಶ್ವಾಮಿತ್ರ
Courtesy:Face book